ಕೆ.ವಿ.ಎಸ್. ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉದ್ಯಮಿ ಕೆ. ಸುಧಾಕರ್ ನಿರ್ಮಾಣದ ಚಿತ್ರ ‘ವರ್ಧನ’. ಸರಿಸುಮಾರು ೧೯೦ ಸಿನಿಮಾಗಳಿಗೆ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿರುವ ನಾಗೇಂದ್ರ ಅರಸ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಆರನೇ ಚಿತ್ರ ವರ್ಧನ. ಎಪ್ಪತ್ತರಷ್ಟು ಹಾಸ್ಯ ಮತ್ತು ಉಳಿದ ಮೂವತ್ತು ಭಾಗದಷ್ಟು ಸೆಂಟಿಮೆಂಟ್ ಕಥಾಹಂದರ ಹೊಂದಿರುವ ‘ವರ್ಧನ’ ಚಿತ್ರಕ್ಕಾಗಿ ೩೫ ದಿನಗಳ ಕಾಲ ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ.
ನಾಗೇಂದ್ರ ಅರಸ್ ಕಥೆ ಚಿತ್ರಕತೆ, ಸಂಕಲನ ಮತ್ತು ನಿರ್ದೇಶನವನ್ನು ಮಾಡಿರುವ ‘ವರ್ಧನ’ ಚಿತ್ರಕ್ಕೆ ರಾಕೇಶ್ ಸಿ. ತಿಲಕ್ ಅವರ ಛಾಯಾಗ್ರಹಣ, ಮ್ಯಾಥ್ಯೂಸ್ ಮನು ಸಂಗೀತ, ಕುಂಗ್ಫು ಚಂದ್ರ್ರು ಸಾಹಸ, ರೇವಣ್ಣ ಕಲಾ ನಿರ್ದೇಶನ ಮತ್ತು ಸಿದ್ದು ಅವರ ಸಂಭಾಷಣೆಯಿದೆ. ಈ ಚಿತ್ರದಲ್ಲಿ ಮತ್ತೊಂದು ವಿಶೇಷವೆಂದರೆ, ನಟ, ನಿರ್ದೇಶಕ ಮತ್ತು ಸಂಕಲನಕಾರರಾಗಿ ಹೆಸರು ಮಾಡಿರುವ ನಾಗೇಂದ್ರ ಅರಸ್ ‘ವರ್ಧನ’ನ ಮೂಲಕ ನೃತ್ಯ ನಿರ್ದೇಕರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ. ಈ ಚಿತ್ರದ ಎರಡು ಹಾಡುಗಳಿಗೆ ಸ್ವತಃ ನಾಗೇಂದ್ರ ಅರಸ್ ಅವರೇ ನೃತ್ಯ ನಿರ್ದೇಶನ ಮಾಡಿದ್ದಾರೆ.
ಉದ್ಯಮಿ ಕೆ. ಸುಧಾಕರ್ ಅವರಿಗೆ ಮೊದಲಿನಿಂದಲೂ ಸಿನಿಮಾ ಆಸಕ್ತಿ ಇದ್ದು, ನಾಗೇಂದ್ರ ಅರಸ್ ಅವರ ಕಥೆ ಇಷ್ಟವಾದ ಕಾರಣಕ್ಕೆ ‘ವರ್ಧನ’ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಚಿತ್ರದಲ್ಲಿ ಮೊಗ್ಗಿನ ಮನಸು ಖ್ಯಾತಿಯ ಹರ್ಷ ನಾಯಕನಾಗಿ ನಟಿಸಿದ್ದಾರೆ. ನೇಹಾ ಪಾಟೀಲ್, ಚಿಕ್ಕಣ್ಣ, ಪದ್ಮಜಾ ರಾವ್, ಶೋಭರಾಜ್, ಪೆಟ್ರೋಸ್ ಪ್ರಸನ್ನ, ಯತಿರಾಜ್, ಲಿಂಗರಾಜು ಅವರ ತಾರಾಗಣದೊಂದಿಗೆ ಮತ್ತು ನಿರ್ದೇಶಕ ನಾಗೇಂದ್ರ ಅರಸ್ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ವಹಿಸಿದ್ದಾರೆ.
‘ವರ್ಧನ’ ಚಿತ್ರದ ರೀರೆಕಾರ್ಡಿಂಗ್ ಕಾರ್ಯ ನೆರವೇರುತ್ತಿದ್ದು, ನವೆಂಬರ್ ತಿಂಗಳ ಮೊದಲ ವಾರದಲ್ಲಿ ಆಡಿಯೋ ಬಿಡುಗಡೆಯಾಗಲಿದೆ.